ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ವಚನಗಳ ವಿವರಣೆ

ಫಿಲಿಪ್ಪಿ 4:6, 7—‘ಯಾವ ವಿಷಯವಾಗಿಯೂ ಚಿಂತೆ ಮಾಡಬೇಡಿ’

ಫಿಲಿಪ್ಪಿ 4:6, 7—‘ಯಾವ ವಿಷಯವಾಗಿಯೂ ಚಿಂತೆ ಮಾಡಬೇಡಿ’

 “ಯಾವುದ್ರ ಬಗ್ಗೆನೂ ಚಿಂತೆ ಮಾಡಬೇಡಿ. ಅದ್ರ ಬದ್ಲು ಯಾವಾಗ್ಲೂ ದೇವರಿಗೆ ಪ್ರಾರ್ಥಿಸಿ. ಪ್ರತಿಯೊಂದು ವಿಷ್ಯದಲ್ಲೂ ಮಾರ್ಗದರ್ಶನೆಗಾಗಿ ಕೇಳ್ಕೊಳ್ಳಿ, ಅಂಗಲಾಚಿ ಬೇಡಿ, ಯಾವಾಗ್ಲೂ ಆತನಿಗೆ ಧನ್ಯವಾದ ಹೇಳಿ. ಆಗ ನಿಮ್ಮ ತಿಳುವಳಿಕೆಗೂ ಮೀರಿದ ಶಾಂತಿಯನ್ನ ದೇವರು ನಿಮಗೆ ಕೊಡ್ತಾನೆ. ಈ ರೀತಿ ಆತನು ಕ್ರಿಸ್ತ ಯೇಸುವಿನ ಮೂಲಕ ನಿಮ್ಮ ಹೃದಯನ, ಯೋಚ್ನೆನ ಕಾಯ್ತಾನೆ.”—ಫಿಲಿಪ್ಪಿ 4:6, 7, ಹೊಸ ಲೋಕ ಭಾಷಾಂತರ.

 “ಯಾವ ವಿಷಯವಾಗಿಯೂ ಚಿಂತೆ ಮಾಡದೆ ಸರ್ವ ವಿಷಯದಲ್ಲಿ ಕೃತಜ್ಞತಾಸ್ತುತಿಯೊಡನೆ ಪ್ರಾರ್ಥನೆ ವಿಜ್ಞಾಪನೆಗಳನ್ನು ಮಾಡುತ್ತಾ ನಿಮ್ಮ ಬೇಡಿಕೆಯನ್ನು ದೇವರಿಗೆ ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನೂ ಮೀರುವ ದೇವರ ಸಮಾಧಾನವು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವುದು.”—ಫಿಲಿಪ್ಪಿ 4:6, 7, ಪವಿತ್ರ ಬೈಬಲ್‌.

ಫಿಲಿಪ್ಪಿ 4:6, 7—ಅರ್ಥ

 ದೇವರ ಆರಾಧಕರಿಗೆ ತುಂಬ ಚಿಂತೆ, ವಿಪರೀತ ಯೋಚನೆ, ಆತಂಕ ಆದಾಗ ದೇವರಿಗೆ ಪ್ರಾರ್ಥನೆ ಮಾಡುತ್ತಾರೆ. ಆಗ ಅವರ ಮನಸ್ಸು ಹಗುರ ಆಗುತ್ತದೆ. ದೇವರು ಅವರಿಗೆ ಮನಶ್ಶಾಂತಿ ಕೊಡುತ್ತಾನೆ. ಹಾಗಾಗಿ ಅವರಿಗೆ ಅಲ್ಲೋಲಕಲ್ಲೋಲ ಆಗಿರುವ ಮನಸ್ಸಿನ ಆತಂಕ, ಭಾವನೆಗಳನ್ನು ನಿಯಂತ್ರಣದಲ್ಲಿಡಲು, ಸರಿಯಾಗಿ ಯೋಚಿಸಲು ಆಗುತ್ತದೆ. ಅಂಥ ಮನಶ್ಶಾಂತಿಯನ್ನು ಪಡೆಯಲು ಸಹಾಯ ಮಾಡುವ ಬೇರೆ ಬೇರೆ ವಿಧದ ಪ್ರಾರ್ಥನೆಗಳ ಬಗ್ಗೆ ವಚನ 6 ರಲ್ಲಿದೆ.

 ಅಂಗಲಾಚಿ ಬೇಡುವುದು (ವಿಜ್ಞಾಪನೆ) ಅಂದ್ರೆ ಸಹಾಯ ಮಾಡು ಅಂತ ದೇವರ ಹತ್ತಿರ ಬಿಡದೆ ಬೇಡಿಕೊಳ್ಳುವುದು. ತುಂಬ ಟೆನ್‌ಶನ್‌ನಲ್ಲಿರುವಾಗ, ಅಪಾಯದಲ್ಲಿ ಇರುವಾಗ ನಾವು ಯೇಸುವಿನ ತರ ದೇವರ ಹತ್ತಿರ ಅಂಗಲಾಚಿ ಬೇಡುತ್ತೇವೆ. (ಇಬ್ರಿಯ 5:7) ಒಂದೆರಡು ಸಲ ಅಲ್ಲ, ತುಂಬ ಸಲ ಬೇಡುತ್ತೇವೆ.

 ಕೇಳಿಕೊಳ್ಳುವುದು (ಬೇಡಿಕೆ) ಅಂದ್ರೆ ಒಂದು ನಿರ್ದಿಷ್ಟ ವಿಷಯದ ಬಗ್ಗೆ ದೇವರ ಹತ್ತಿರ ವಿನಂತಿಸುವುದು. “ಪ್ರತಿಯೊಂದು ವಿಷ್ಯದ” ಬಗ್ಗೆ, ಪ್ರತಿಯೊಂದು ಸನ್ನಿವೇಶದಲ್ಲೂ ನಾವು ದೇವರ ಸಹಾಯ ಕೇಳಿಕೊಳ್ಳಬಹುದು. ಆದರೆ ನಾವು ಕೇಳಿಕೊಳ್ಳುವ ವಿಷಯ ದೇವರ ಇಷ್ಟದ ಪ್ರಕಾರ ಇರಬೇಕು.—1 ಯೋಹಾನ 5:14.

 ಧನ್ಯವಾದ ಹೇಳುವ (ಕೃತಜ್ಞತಾಸ್ತುತಿ) ಪ್ರಾರ್ಥನೆಗಳಲ್ಲಿ ದೇವರು ಈಗಾಗಲೇ ನಮಗೋಸ್ಕರ ಮಾಡಿರುವ ಮತ್ತು ಮುಂದೆ ಮಾಡಲಿರುವ ವಿಷಯಗಳಿಗೆ ಕೃತಜ್ಞತೆ ಹೇಳುತ್ತೇವೆ. ದೇವರಿಗೆ ಧನ್ಯವಾದ ಹೇಳಲು ನಾವು ಕಾರಣಗಳನ್ನು ಹುಡುಕುವಾಗ ಖುಷಿಯಾಗಿರಲು ಅದು ನಮಗೆ ಸಹಾಯ ಮಾಡುತ್ತದೆ.—1 ಥೆಸಲೊನೀಕ 5:16-18.

 ಇಂಥ ಪ್ರಾರ್ಥನೆಗಳನ್ನು ಮಾಡುವಾಗ ದೇವರು ನಮಗೆ ಶಾಂತಿಯನ್ನು ಕೊಡುತ್ತಾನೆ. ಆತನ ಜೊತೆ ಆಪ್ತ ಸ್ನೇಹ ಇರುವುದರಿಂದ ನಮ್ಮ ಮನಸ್ಸು ಪ್ರಶಾಂತವಾಗಿ ಇರುತ್ತದೆ, ಇದೇ ‘ದೇವಶಾಂತಿ.’ (ರೋಮನ್ನರಿಗೆ 15:13; ಫಿಲಿಪ್ಪಿ 4:9) ಇದು “ತಿಳುವಳಿಕೆಗೂ ಮೀರಿದ ಶಾಂತಿ.” ಏಕೆಂದರೆ ಇದನ್ನು ಕೊಡುವುದು ದೇವರು. ನಮ್ಮಿಂದ ಊಹಿಸಲಿಕ್ಕೂ ಆಗದೇ ಇರುವಷ್ಟು ಮಟ್ಟಿಗೆ ಅದು ನಮಗೆ ಸಹಾಯ ಮಾಡುತ್ತದೆ.

 ದೇವಶಾಂತಿಯು ನಮ್ಮ ಹೃದಯಗಳನ್ನು ಕಾಯುತ್ತದೆ ಎಂದು ಫಿಲಿಪ್ಪಿ 4:7 ಹೇಳುತ್ತದೆ. ‘ಕಾಯುತ್ತದೆ’ ಅನ್ನೋದಕ್ಕಿರುವ ಗ್ರೀಕ್‌ ಪದ ಮಿಲಿಟರಿಗೆ ಸಂಬಂಧಪಟ್ಟ ಪದವಾಗಿದೆ. ಭದ್ರಕೋಟೆಗಳಿರುವ ಒಂದು ನಗರ ಕಾಯಲು ಸೈನಿಕರು ಮಾಡುವ ಕೆಲಸಗಳನ್ನು ಆ ಪದ ವರ್ಣಿಸುತ್ತದೆ. ಅದೇ ತರ ದೇವರು ಕೊಡುವ ಶಾಂತಿಯು ನಮ್ಮ ಭಾವನೆಗಳನ್ನು, ಯೋಚನೆಗಳನ್ನು ಕಾಪಾಡುತ್ತದೆ. ಸಮಸ್ಯೆಯ ಸುಳಿಯಲ್ಲಿ ಸಿಕ್ಕಿ ಮುಳುಗಿ ಹೋಗದಿರಲು ಅದು ನಮಗೆ ಸಹಾಯ ಮಾಡುತ್ತದೆ.

 ದೇವರು ಕೊಡುವ ಶಾಂತಿ ನಮ್ಮನ್ನು “ಕ್ರಿಸ್ತ ಯೇಸುವಿನ ಮೂಲಕ” ಕಾಪಾಡುತ್ತದೆ. ಏಕೆಂದ್ರೆ ದೇವರ ಜೊತೆ ನಾವು ಒಳ್ಳೇ ಸಂಬಂಧದಲ್ಲಿ ಇರಲು ಕಾರಣನೇ ಯೇಸು. ನಾವು ಮಾಡಿದ ಪಾಪಗಳಿಗಾಗಿ ಆತನು ತನ್ನ ಜೀವವನ್ನೇ ಬಿಡುಗಡೆ ಬೆಲೆಯಾಗಿ ಕೊಟ್ಟನು. ಆತನ ಮೇಲೆ ನಂಬಿಕೆ ಇದ್ದರೆ ದೇವರು ಕೊಡುವ ಆಶೀರ್ವಾದಗಳು ನಮಗೆ ಸಿಗುತ್ತವೆ. (ಇಬ್ರಿಯ 11:6) ನಾವು ಪ್ರಾರ್ಥನೆಯನ್ನು ಯೇಸುವಿನ ಮೂಲಕ ಮಾಡಬೇಕು. ಏಕೆಂದ್ರೆ “ನನ್ನ ಮೂಲಕ ಅಲ್ಲದೆ ಯಾರೂ ತಂದೆ ಹತ್ರ ಬರೋಕಾಗಲ್ಲ” ಎಂದು ಯೇಸು ಹೇಳಿದನು.—ಯೋಹಾನ 14:6; 16:23.

ಫಿಲಿಪ್ಪಿ 4:6, 7—ಸಂದರ್ಭ

 ಫಿಲಿಪ್ಪಿ ಪುಸ್ತಕ ಅಪೊಸ್ತಲ ಪೌಲನು ಫಿಲಿಪ್ಪಿ a ನಗರದಲ್ಲಿದ್ದ ಕ್ರೈಸ್ತರಿಗೆ ಬರೆದ ಪತ್ರವಾಗಿದೆ. ಈ ಪುಸ್ತಕದ 4 ನೇ ಅಧ್ಯಾಯದಲ್ಲಿ ಖುಷಿಯಾಗಿ ಇರಬೇಕು ಅಂತ ಪೌಲ ಆ ಸಭೆಯಲ್ಲಿ ಇದ್ದವರಿಗೆ ಪ್ರೋತ್ಸಾಹಿಸಿದ. ಅವರು ತೋರಿಸಿದ ಉದಾರತೆಯಿಂದ ತುಂಬ ಖುಷಿ ಆಯಿತು ಅಂತ ಹೇಳುತ್ತಾ ಧನ್ಯವಾದ ಹೇಳಿದ. (ಫಿಲಿಪ್ಪಿ 4:4, 10, 18) ಪ್ರಾರ್ಥನೆ ಮಾಡಿದರೆ ಹೇಗೆ ದೇವಶಾಂತಿ ಸಿಗುತ್ತದೆ ಮತ್ತು ‘ಶಾಂತಿಯ ದೇವರಿಂದ’ ಸಹಾಯ ಪಡೆಯಬೇಕಾದರೆ ನಾವು ಯಾವ ತರ ಯೋಚಿಸಬೇಕು, ಏನು ಮಾಡಬೇಕು ಅಂತ ಹೇಳಿದ.—ಫಿಲಿಪ್ಪಿ 4:8, 9.

a ಈಗಿನ ಗ್ರೀಸ್‌ನಲ್ಲಿದೆ.