ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸತ್ಯದ ಹುಡುಕಾಟ . . .

ಸತ್ಯದ ಹುಡುಕಾಟ . . .

ಸತ್ಯ ತಿಳಿಯೋದ್ರಿಂದ ನಮ್ಮ ಪ್ರಾಣಾನೇ ಉಳಿಸಿಕೊಳ್ಳಬಹುದು! ಉದಾಹರಣೆಗೆ, ಈ ಕೆಳಗಿನ ಪ್ರಶ್ನೆಗೆ ಉತ್ತರ ತಿಳಿದುಕೊಂಡಿದ್ದರಿಂದ ನಮ್ಮೆಲ್ಲರ ಜೀವನ ಹೇಗೆ ಬದಲಾಯಿತು ಅಂತ ಗಮನಿಸಿ, ಸಾಂಕ್ರಾಮಿಕ ರೋಗಗಳು ಹೇಗೆ ಹರಡುತ್ತೆ?

ತುಂಬಾ ವರ್ಷಗಳ ತನಕ, ಈ ಪ್ರಶ್ನೆಗೆ ಉತ್ತರ ಯಾರಿಗೂ ಗೊತ್ತಿರಲಿಲ್ಲ. ಈ ರೋಗಗಳು ಬಂದಾಗ ಲಕ್ಷಾಂತರ ಜನ ತಮ್ಮ ಪ್ರಾಣ ಕಳಕೊಂಡರು. ಇದಕ್ಕೆಲ್ಲಾ ಕೆಲವು ಕೀಟಾಣು ಮತ್ತು ಬ್ಯಾಕ್ಟೀರಿಯಾಗಳೇ ಕಾರಣ ಅಂತ ವಿಜ್ಞಾನಿಗಳು ಆಮೇಲೆ ಕಂಡುಹಿಡಿದರು. ಈ ಒಂದೇ ಒಂದು ಸತ್ಯ ತಿಳಿದಿದ್ದರಿಂದ ಏನು ಪ್ರಯೋಜನ ಆಯ್ತು? ಜನರು ಶುದ್ಧವಾಗಿರಲು ಕಲಿತರು. ಅಷ್ಟೇ ಅಲ್ಲ, ಹೊಸ ಹೊಸ ಮದ್ದುಗಳನ್ನು ಕಂಡುಹಿಡಿದರು. ಇದರಿಂದ, ಕೋಟ್ಯಾಂತರ ಜನರಿಗೆ ಆರೋಗ್ಯಕರ ಜೀವನ ನಡೆಸಲು, ಮತ್ತೆ ಇಂಥ ಕಾಯಿಲೆಗಳು ಬರದಂತೆ ನೋಡಿಕೊಳ್ಳಲು ಸಹಾಯ ಆಯ್ತು.

ಬರೀ ಇದೊಂದೇ ಪ್ರಶ್ನೆ ಅಲ್ಲ, ನಮಗೆ ಉತ್ತರ ಸಿಗದ ಎಷ್ಟೋ ಪ್ರಾಮುಖ್ಯ ಪ್ರಶ್ನೆಗಳು ಇವೆ. ನಿಮಗೇನು ಅನಿಸುತ್ತೆ? ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ತಿಳಿಯೋದ್ರಿಂದ ನಿಮ್ಮ ಜೀವನ ಬದಲಾಗಬಹುದಾ?

  • ದೇವರು ಯಾರು?

  • ಯೇಸು ಕ್ರಿಸ್ತ ಯಾರು?

  • ದೇವರ ಸರ್ಕಾರ ಅಂದ್ರೆ ಏನು?

  • ಭವಿಷ್ಯ ಹೇಗಿರುತ್ತೆ?

ಈ ಪ್ರಶ್ನೆಗಳಿಗೆ ಲಕ್ಷಾಂತರ ಜನರು ಉತ್ತರ ಕಂಡುಕೊಂಡಿದ್ದಾರೆ. ಇದ್ರಿಂದ ಅವರ ಜೀವನ ಇನ್ನಷ್ಟು ಚೆನ್ನಾಗಾಗಿದೆ. ನೀವೂ ಇದರ ಉತ್ತರ ತಿಳುಕೊಂಡು ಪ್ರಯೋಜನ ಪಡೆಯಬಹುದು.

ನೀವೂ ಸತ್ಯ ತಿಳಿಯಲು ಸಾಧ್ಯ

ಸತ್ಯನಾ ಹೇಗೆ ತಿಳುಕೊಳ್ಳೋದು ಅಂತ ನೀವೀಗ ಯೋಚಿಸುತ್ತಿರಬಹುದು. ಯಾಕೆಂದರೆ, ಈಗಿನ ಕಾಲದಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಅಂತ ಕಂಡುಹಿಡಿಯೋದು ತುಂಬ ಕಷ್ಟವಾಗುತ್ತಲೇ ಇದೆ. ಯಾಕೆ?

ತುಂಬ ಜನ ಸರ್ಕಾರ ಹೇಳೋ ಮಾತುಗಳನ್ನ, ನ್ಯೂಸ್‌ನಲ್ಲಿ ಬರೋ ವಿಷಯಗಳನ್ನ ನಂಬಲ್ಲ. ಯಾಕೆಂದರೆ, ಅವರು ಹೇಳೋ ವಿಷಯಗಳಿಗೆ ರೆಕ್ಕೆ-ಪುಕ್ಕ ಸೇರಿಸಿ ಹೇಳುತ್ತಾರೆ. ಕೆಲವೊಮ್ಮೆ ಪೂರ್ತಿ ಸತ್ಯ ಹೇಳಲ್ಲ ಅಥವಾ ಬರೀ ಸುಳ್ಳೇ ಹೇಳುತ್ತಾರೆ. ಹೀಗೆ ತಪ್ಪಾದ ಮಾಹಿತಿ ಜನರಿಗೆ ಸಿಗೋದ್ರಿಂದ, ಒಂದು ವೇಳೆ ಸತ್ಯಾಂಶ ಹೇಳಿದರೂ ನಂಬಲ್ಲ ಅಥವಾ ಅದು ಸತ್ಯನಾ ಸುಳ್ಳಾ ಅಂತ ನೋಡಕ್ಕೂ ಹೋಗಲ್ಲ.

ಪರಿಸ್ಥಿತಿ ಹೀಗಿದ್ದರೂ, ನಾವು ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ನಿಜವಾದ ಉತ್ತರ ತಿಳುಕೊಳ್ಳಬಹುದು. ಅದು ಹೇಗೆ ಅಂತ ನೋಡೋಣ.

ಸತ್ಯಕ್ಕಾಗಿ ಹುಡುಕಾಟ

ಒಂದಲ್ಲಾ ಒಂದು ರೀತಿ, ನಾವೆಲ್ಲರೂ ದಿನಾ ಸತ್ಯಕ್ಕಾಗಿ ಹುಡುಕಾಡುತ್ತೇವೆ. ಅದು ಹೇಗೆ ಅಂತ ಅರ್ಥಮಾಡಿಕೊಳ್ಳಲು, ನಾವೀಗ ಜೆಸಿಕ ಎಂಬವರ ಸನ್ನಿವೇಶ ನೋಡೋಣ. ಅವರು ಹೀಗೆ ಹೇಳುತ್ತಾರೆ: “ನನ್ನ ಮಗಳು ಕಡ್ಲೆಕಾಯಿ ತಿಂದ್ರೆ ಸಾಕು ಮೈಯೆಲ್ಲಾ ಅಲರ್ಜಿ ಆಗುತ್ತೆ. ಕೆಲವೊಮ್ಮೆ ಆಹಾರದಲ್ಲಿ ಸ್ವಲ್ಪಾನೆ ಸ್ವಲ್ಪ ಕಡ್ಲೆಕಾಯಿಯ ಅಂಶ ಇದ್ದರೂ ಅವಳ ಪ್ರಾಣಕ್ಕೇ ಅಪಾಯ ಆಗುತ್ತೆ.” ಇದರಿಂದಾಗಿ ಜೆಸಿಕಾ ಯಾವುದೇ ಆಹಾರ ಪದಾರ್ಥ ತಗೊಂಡರೂ ಅದರಲ್ಲಿ ಕಡ್ಲೆಕಾಯಿಯ ಅಂಶ ಇದ್ಯಾ ಇಲ್ವಾ ಅಂತ ನೋಡಬೇಕು. “ತಿಂಡಿ-ತಿನಿಸುಗಳನ್ನು ಖರೀದಿಸುವಾಗ, ಮೊದ್ಲು ನಾನು ಅದರಲ್ಲಿ ಏನೆಲ್ಲಾ ಹಾಕಿರುತ್ತಾರೆ ಅಂತ ಬರೆದಿರೋ ಪಟ್ಟಿಯನ್ನು ಓದುತ್ತೇನೆ. ಆಮೇಲೆ ಅದನ್ನು ತಯಾರಿಸಿದವರ ಫೋನ್‌ ನಂಬರ್‌ ಪಡೆದು ಅವರಿಗೆ ಕಾಲ್‌ ಮಾಡಿ ಖಚಿತಪಡಿಸಿಕೊಳ್ಳುತ್ತೇನೆ. ಯಾಕೆಂದರೆ ಕೆಲವೊಮ್ಮೆ ಅಕಸ್ಮಾತ್ತಾಗಿ ಅದರಲ್ಲಿ ಕಡ್ಲೆಕಾಯಿಯ ಅಂಶ ಸೇರಿರಬಹುದು. ಇದಷ್ಟೇ ಅಲ್ಲ, ಈ ಕಂಪನಿಯ ಆಹಾರ ತಯಾರಿಸುವ ರೀತಿ ಸರಿನಾ ಅಲ್ವಾ ಅಂತ ಕೆಲವು ಮಾಹಿತಿಗಳನ್ನ ಪಡಕೊಳ್ಳುತ್ತೀನಿ” ಅಂತ ಅವರು ಹೇಳುತ್ತಾರೆ.

ಜೆಸಿಕಾ ಸತ್ಯವನ್ನು ತಿಳಿದುಕೊಳ್ಳಲು ದಿನಾ ಎಷ್ಟೊಂದು ಪರಿಶ್ರಮ ಹಾಕಬೇಕು ಅಲ್ವಾ. ನಮಗೆ ಇಂಥ ಪರಿಸ್ಥಿತಿ ಇಲ್ಲಾ ನಿಜ. ಆದರೆ, ನಾವೂ ಸಹ ನಮಗೆ ಬರುವ ಪ್ರಶ್ನೆಗಳಿಗೆ ಜೆಸಿಕಾ ತರ ಉತ್ತರ ಕಂಡುಕೊಳ್ಳಬಹುದು. ಹೇಗೆ?

  • ಸರಿಯಾದ ಮಾಹಿತಿಗಳನ್ನು ಪಡೆದುಕೊಳ್ಳಿ.

  • ಹೆಚ್ಚಿನ ಸಂಶೋಧನೆ ಮಾಡಿ.

  • ಮಾಹಿತಿಯ ಮೂಲ ಸರಿಯಾಗಿದೆಯಾ ಅಂತ ನೋಡಿ.

ಈ ಮೂರು ಹೆಜ್ಜೆಗಳನ್ನು ಪಾಲಿಸಿದರೆ, ಜೀವನದಲ್ಲಿ ಬರುವ ಪ್ರಾಮುಖ್ಯ ಪ್ರಶ್ನೆಗಳಿಗೂ ನಾವು ಉತ್ತರ ಕಂಡುಕೊಳ್ಳಬಹುದು. ಎಲ್ಲಿ?

ಸತ್ಯ ತಿಳಿಯಲು ಒಂದು ವಿಶಿಷ್ಟ ಪುಸ್ತಕ

ಬೈಬಲ್‌ ಬಗ್ಗೆ ಸತ್ಯ ಕಲಿಯುವಾಗ ಸಹ ಜೆಸಿಕಾ ಈ ಮೇಲಿನ ಮೂರು ಹೆಜ್ಜೆಗಳನ್ನೇ ಪಾಲಿಸಿದಳು. “ಬೈಬಲನ್ನು ಗಮನ ಕೊಟ್ಟು ಓದಿದ್ರಿಂದ ಮತ್ತು ಸರಿಯಾಗಿ ಸಂಶೋಧನೆ ಮಾಡಿದ್ರಿಂದ ನಂಗೆ ಬೈಬಲ್‌ನಲ್ಲಿ ಇರೋ ಸತ್ಯ ಏನು ಅಂತ ತಿಳುಕೊಳ್ಳೋಕೆ ಆಯ್ತು” ಎನ್ನುತ್ತಾರೆ ಜೆಸಿಕಾ. ಇವರಂತೆ, ಲಕ್ಷಾಂತರ ಜನ ಬೈಬಲಿನಿಂದ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಪಡೆದಿದ್ದಾರೆ:

  • ನಮ್ಮ ಜೀವನದ ಉದ್ದೇಶ ಏನು?

  • ಸತ್ತ ಮೇಲೆ ನಮಗೆ ಏನಾಗುತ್ತೆ?

  • ನಾವು ಯಾಕೆ ಕಷ್ಟಪಡುತ್ತಿದ್ದೇವೆ?

  • ನಮ್ಮ ಕಷ್ಟಗಳನ್ನು ತೆಗೆದು ಹಾಕಲು ದೇವರು ಏನೆಲ್ಲಾ ಮಾಡುತ್ತಿದ್ದಾನೆ?

  • ಸಂತೋಷಕರ ಕುಟುಂಬ ಜೀವನ ನಮ್ಮದಾಗಲು ನಾವೇನು ಮಾಡಬೇಕು?

ನೀವು ಬೈಬಲ್‌ ಓದೋದ್ರಿಂದ ಮತ್ತು ಆನ್‌ಲೈನಲ್ಲಿ ಅಂದ್ರೆ www.ps8318.comನಲ್ಲಿ ಸಂಶೋಧನೆ ಮಾಡೋದ್ರಿಂದ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು.