ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 5

ದೇವರು ಭೂಮಿಯನ್ನು ಯಾವ ಉದ್ದೇಶದಿಂದ ಸೃಷ್ಟಿಸಿದ್ದಾನೆ?

ದೇವರು ಭೂಮಿಯನ್ನು ಯಾವ ಉದ್ದೇಶದಿಂದ ಸೃಷ್ಟಿಸಿದ್ದಾನೆ?

1. ದೇವರು ಭೂಮಿಯನ್ನು ಯಾಕೆ ಸೃಷ್ಟಿಸಿದನು?

ಯೆಹೋವ ದೇವರು ಭೂಮಿಯನ್ನು ಸೃಷ್ಟಿಸಿದ್ದು ಮನುಷ್ಯರಿಗಾಗಿ. ಮೊದಲ ಮನುಷ್ಯ ಆದಾಮ ಮತ್ತವನ ಹೆಂಡತಿ ಹವ್ವ ಈ ಭೂಗ್ರಹದಲ್ಲಿ ತಮ್ಮ ಸಂತತಿಯನ್ನು ಹೆಚ್ಚಿಸಬೇಕಿತ್ತೆ ವಿನಾ ಸ್ವರ್ಗದಲ್ಲಿ ಅಲ್ಲ. ಏಕೆಂದರೆ ಸ್ವರ್ಗದಲ್ಲಿ ಜೀವಿಸಲೆಂದು ದೇವದೂತರನ್ನು ಸೃಷ್ಟಿಸಿದ್ದನು. (ಯೋಬ 38:4, 6) ದೇವರು ಮೊದಲ ಮನುಷ್ಯನನ್ನು ಸೃಷ್ಟಿಸಿ ಏದೆನ್‌ ಎಂಬ ಸುಂದರ ಉದ್ಯಾನವನವನ್ನು ಕೊಟ್ಟನು. ಅಲ್ಲಿ ಯಾವುದಕ್ಕೂ ಕೊರತೆಯಿರಲಿಲ್ಲ. ಸುಖ ನೆಮ್ಮದಿ ಇತ್ತು. (ಆದಿಕಾಂಡ 2:15-17) ಆದಾಮನ ಸಂತತಿಯಾದ ಮನುಷ್ಯರೆಲ್ಲರೂ ಭೂಮಿಯಲ್ಲಿ ಸಾವೇ ಇಲ್ಲದೆ ಚಿರಕಾಲ ಸುಖ ನೆಮ್ಮದಿಯಿಂದ ಬದುಕಬೇಕೆನ್ನುವುದು ದೇವರ ಉದ್ದೇಶವಾಗಿತ್ತು.​ಕೀರ್ತನೆ 37:29; 115:16 ಓದಿ.

ಭೂಗ್ರಹದಲ್ಲಿ ಏದೆನ್‌ ತೋಟ ಮಾತ್ರ ಮನೋಹರವಾದ ಉದ್ಯಾನವನವಾಗಿತ್ತು. ಅದನ್ನು ಭೂಮಿಯ ಎಲ್ಲಾ ಕಡೆಗಳಿಗೆ ಆದಾಮ ಹವ್ವ ವಿಸ್ತರಿಸಬೇಕಿತ್ತು ಮತ್ತು ಭೂಮಿಯಲ್ಲಿ ತಮ್ಮ ಸಂತತಿಯನ್ನು ವೃದ್ಧಿ ಮಾಡಬೇಕಿತ್ತು. (ಆದಿಕಾಂಡ 1:28) ಭೂಮಿ ಯಾವತ್ತೂ ನಾಶವಾಗುವುದಿಲ್ಲ. ಮನುಷ್ಯರು ಯುಗಯುಗಾಂತರಕ್ಕೂ ಇಲ್ಲಿ ಜೀವಿಸುವರು.​ಕೀರ್ತನೆ 104:5 ಓದಿ.

ವಿಡಿಯೊ ನೋಡಿ ದೇವರು ಭೂಮಿಯನ್ನು ಯಾಕೆ ಸೃಷ್ಟಿಸಿದನು?

2. ಭೂಮಿಯೇಕೆ ಈಗ ಸುಂದರ ಉದ್ಯಾನವನವಾಗಿಲ್ಲ?

ಆದಾಮ ಮತ್ತು ಹವ್ವ ಯೆಹೋವ ದೇವರ ಮಾತನ್ನು ಮೀರಿ ನಡೆದರು. ಆ ಕಾರಣ ದೇವರು ಅವರನ್ನು ಏದೆನ್‌ ತೋಟದಿಂದ ಹೊರಗಟ್ಟಿದನು. ಸುಂದರ ಏದೆನ್‌ ತೋಟದಲ್ಲಿ ಜೀವಿಸುವ ಅವಕಾಶ ಅವರ ಕೈತಪ್ಪಿತು. ಇಡೀ ಭೂಗ್ರಹವನ್ನು ಪುನಃ ಸುಂದರ ಉದ್ಯಾನವನದಂತೆ ಮಾಡಲು ಇಷ್ಟರವರೆಗೆ ಯಾರಿಂದಲೂ ಆಗಿಲ್ಲ. “ಭೂಲೋಕವು ದುಷ್ಟರ ಕೈ ಸೇರಿದೆ” ಎಂದು ಬೈಬಲ್‌ ತಿಳಿಸುತ್ತದೆ.—ಯೋಬ 9:24.​ಆದಿಕಾಂಡ 3:23, 24 ಓದಿ.

ಹಾಗಾದರೆ ಯೆಹೋವ ದೇವರ ಉದ್ದೇಶ ಕೈಗೂಡುವುದಿಲ್ಲವೇ? ಕೈಗೂಡುತ್ತೆ. ದೇವರು ಸರ್ವಶಕ್ತ. ಆತನು ನೆನಸಿದ್ದು ನಡೆದೇ ತೀರುತ್ತೆ. (ಯೆಶಾಯ 45:18) ಮಾನವಕುಲಕ್ಕಾಗಿರುವ ತನ್ನ ಉದ್ದೇಶವನ್ನು ಆತನು ತಪ್ಪದೆ ನೆರವೇರಿಸುವನು.​ಕೀರ್ತನೆ 37:11, 34 ಓದಿ.

3. ಇಡೀ ಭೂಮಿ ಮತ್ತೆ ಏದೆನ್‌ ತೋಟದಂತೆ ಮಾರ್ಪಡುವುದೇ?

ಹೌದು. ರಾಜ ಯೇಸು ಇಡೀ ಭೂಮಿಯನ್ನು ಪುನಃ ಏದೆನ್‌ ತೋಟದಂತೆ ಮಾಡುವನು. ಹೇಗೆಂದರೆ, ಅರ್ಮಗೆದೋನ್‌ ಎಂಬ ಯುದ್ಧದಲ್ಲಿ ಅವನು ದೇವದೂತರ ಮಹಾ ಸೈನ್ಯದ ಸೇನಾಪತಿಯಾಗಿ ದೇವರ ಶತ್ರುಗಳನ್ನು ನಾಶಮಾಡುವನು. ವೈರಿಗಳ ನಾಯಕನಾದ ಸೈತಾನನನ್ನು 1,000 ವರ್ಷ ಬಂಧನದಲ್ಲಿ ಇಡುವನು. ಆದರೆ ದೇವಜನರನ್ನು ಕಾಪಾಡುವನು. ಅವರು ಇದೇ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುವರು.​ಪ್ರಕಟನೆ 20:1-3; 21:3, 4 ಓದಿ.

4. ಮಾನವರ ಕಷ್ಟಸಂಕಟಗಳಿಗೆ ಕೊನೆ ಯಾವಾಗ?

ಭೂಮಿಯಲ್ಲಿ ಕೆಟ್ಟ ಸಂಗತಿಗಳೇ ಇಲ್ಲದಂತೆ ದೇವರು ಯಾವಾಗ ಮಾಡುವನು? ಬಲು ಬೇಗನೇ ಮಾಡಲಿದ್ದಾನೆ ಎಂದು ಬೈಬಲ್‌ ತೋರಿಸುತ್ತದೆ. ಅಂತ್ಯ ಯಾವಾಗ ಬರುವುದು ಎನ್ನುವುದನ್ನು ಅರಿತುಕೊಳ್ಳಲು ಯೇಸು ಬೈಬಲ್‌ನಲ್ಲಿ “ಸೂಚನೆ” ಅಥವಾ ಗುರುತು ನೀಡಿದ್ದಾನೆ. ಅವನು ಸೂಚನೆಯಾಗಿ ನೀಡಿದ ಎಲ್ಲಾ ಸಂಗತಿಗಳು ನಮ್ಮ ಕಣ್ಮುಂದೆ ನಡೆಯುತ್ತಿವೆ. ಅಲ್ಲದೆ ನಾವು ಅಂತ್ಯ ಕಾಲದಲ್ಲಿ ಜೀವಿಸುತ್ತಿದ್ದೇವೆ ಎನ್ನುವುದಕ್ಕೆ ಬಲವಾದ ಪುರಾವೆ ನೀಡುತ್ತಿವೆ. ಯೇಸು ಹೇಳಿದ ಸಂಗತಿಗಳು ಇಂದು ಎಷ್ಟರಮಟ್ಟಿಗೆ ನಡೆಯುತ್ತಿವೆಯೆಂದರೆ ಅಂತ್ಯ ಬೇಗನೆ ಬರದಿದ್ದರೆ ಮನುಷ್ಯರು ಭೂಮಿಯಲ್ಲಿ ಬದುಕುಳಿಯುವುದಿಲ್ಲ.​ಮತ್ತಾಯ 24:3, 7-14, 21, 22 ಓದಿ.

ಯೇಸು ಸ್ವರ್ಗದಿಂದ ಭೂಮಿಯನ್ನು 1,000 ವರುಷ ಆಳುವಾಗ ಈಗಿರುವ ಎಲ್ಲ ಕಷ್ಟತೊಂದರೆಗಳು ಇರಲ್ಲ. (ಯೆಶಾಯ 9:6, 7; 11:9) ಯೇಸು ರಾಜನಾಗಿ ಮಾತ್ರವಲ್ಲ ಮಹಾ ಯಾಜಕನಾಗಿಯೂ ಸೇವೆ ಸಲ್ಲಿಸುತ್ತಾ ದೇವಭಕ್ತರನ್ನು ಪಾಪಮುಕ್ತ ಮಾಡುತ್ತಾನೆ. ಹೀಗೆ ಪಾಪದ ಫಲವಾದ ವೃದ್ಧಾಪ್ಯ, ರೋಗ, ಮರಣವನ್ನು ದೇವರು ತನ್ನ ಮಗನಾದ ಯೇಸುವಿನ ಮೂಲಕ ಅಳಿಸಿ ಹಾಕುವನು.​ಯೆಶಾಯ 25:8; 33:24 ಓದಿ.

5. ಭೂಮಿಯಲ್ಲಿ ಯಾರು ಶಾಶ್ವತವಾಗಿ ಬದುಕುವರು?

ರಾಜ್ಯ ಸಭಾಗೃಹದಲ್ಲಿ ದೇವರನ್ನು ಪ್ರೀತಿಸುವ ಮತ್ತು ಆತನನ್ನು ಮೆಚ್ಚಲು ಬಯಸುವಂಥ ಜನರು ನಮಗೆ ಸಿಗುತ್ತಾರೆ

ದೇವರ ಮಾತನ್ನು ಆಲಿಸಿ ಪಾಲಿಸುವವರು. (1 ಯೋಹಾನ 2:17) ಯೇಸು ತನ್ನ ಅನುಯಾಯಿಗಳಿಗೆ ದೀನ ಜನರನ್ನು ಹುಡುಕಿ ದೇವರ ಇಷ್ಟಾನಿಷ್ಟಗಳನ್ನು ಬೋಧಿಸುವಂತೆ ತಿಳಿಸಿದನು. ಇಂದಿಗೂ ಆ ಕೆಲಸ ನಡೆಯುತ್ತಿದೆ. ಭವಿಷ್ಯದಲ್ಲಿ ಸಾವಿಲ್ಲದ ಜೀವನ ಪಡೆಯಲು ಏನು ಮಾಡಬೇಕೆಂದು ಯೆಹೋವ ದೇವರು ನಮ್ರ ವ್ಯಕ್ತಿಗಳಿಗೆ ತರಬೇತು ನೀಡುತ್ತಿದ್ದಾನೆ. (ಚೆಫನ್ಯ 2:3) ಯೆಹೋವನ ಸಾಕ್ಷಿಗಳ ಆರಾಧನಾ ಸ್ಥಳವಾಗಿರುವ ರಾಜ್ಯ ಸಭಾಗೃಹದಲ್ಲಿ ಲಕ್ಷಾಂತರ ಜನರಿಗೆ ಬೋಧಿಸುತ್ತಿದ್ದಾನೆ. ಅವರು ಒಳ್ಳೇ ಗಂಡ-ಹೆಂಡತಿಯಾಗಲು, ಉತ್ತಮ ತಂದೆ-ತಾಯಿಯಾಗಲು ಕಲಿತುಕೊಳ್ಳುತ್ತಿದ್ದಾರೆ. ಹೀಗೆ ಹೆತ್ತವರು-ಮಕ್ಕಳು ಜೊತೆಯಾಗಿ ದೇವರನ್ನು ಆರಾಧಿಸುತ್ತಿದ್ದಾರೆ. ಬೈಬಲ್‌ನಿಂದ ತಮ್ಮ ಬದುಕನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳುತ್ತಿದ್ದಾರೆ.​ಮೀಕ 4:1-4 ಓದಿ.